ಮೇ 21, 2026

ಪುಸ್ತಕ ಪರಿಚಯ: The girl with seven names


ಡಾ ಅಶೋಕ್ ಕೆ ಆರ್ 

ಬಿಸಿಲೊತ್ತಿನಲ್ಲಿ ನಮ್ಮ ಮನೆಯ ಕಾಂಪೌಂಡಿನೊಳಗೆ ಅಪರಿಚಿತರು ನೆರಳು ಅರಸಿ ಬಂದರೆ ಮುನಿದು ರೇಗುವ ನಾವು ಅದೇ ತರಹ ಪಕ್ಕದ ಮನೆಯವರು ಯಾರ ಮೇಲೋ ರೇಗುತ್ತಿದ್ದರೆ "ಐದು ನಿಮಿಷ ನೆರಳಲ್ಲಿ ನಿಂತು ಹೋದರೆ ಇವರ ಗಂಟೇನು ಹೋಗ್ತದೆ" ಅಂತ ಪಕ್ಕದ ಮನೆಯವರ ಬಗ್ಗೆ ಗೊಣಗಿಕೊಳ್ಳುತ್ತೇವೆ! 

ಈ ಯೋಚನೆ ಪದೇ ಪದೇ ತಲೆಯಲ್ಲಿ ಬಂದಿದ್ದು Hyeonseo lee (co author - David john) ಬರೆದಿರುವ The girl with seven names: A north korean defectors story ಓದುವಾಗ. ವಲಸೆಯನ್ನು ನಿಯಂತ್ರಿಸುವ ಕೆಲಸ ಎಷ್ಟೇ ನಡೆದರೂ ವಲಸೆಯನ್ನು ನೂರು ಪ್ರತಿಶತಃ ನಿಲ್ಲಿಸುವುದು ಯಾರ ಕೈಲೂ ಸಾಧ್ಯವಿಲ್ಲ. ಕುತೂಹಲಕ್ಕೆ, ಒಂದು ದಿನವೋ ಅಥವಾ ಒಂದು ವಾರದ ಮಟ್ಟಿಗೆಂದೋ ಸರ್ವಾಧಿಕಾರದ ಉತ್ತರ ಕೊರಿಯಾದಿಂದ ಚೀನಾಕ್ಕೆ ಭೇಟಿ ಕೊಡುವ Hyeonseo lee ಯ ಜೀವನಗಾಥೆಯಿದು. ಎಷ್ಟೋ ಕಲ್ಪಿತ ಕತೆಗಳಿಗಿಂತ ನಿಜಜೀವನದ ಘಟನೆಗಳೇ ರೋಚಕವಾಗಿರ್ತವೆ ಎನ್ನುವುದಕ್ಕೂ ಈ ಪುಸ್ತಕ ಒಂದು ಉದಾಹರಣೆಯಂತಿದೆ.

ಸರ್ವಾಧಿಕಾರದ ಆಡಳಿತ ಹೇಗಿರುತ್ತದೆ, ಜನರ ಮನಸ್ಸನ್ನು ಭಾವನೆಗಳನ್ನು ಹೇಗೆಲ್ಲಾ ನಿಯಂತ್ರಿಸುತ್ತಾರೆ, ಜನರನ್ನೇ ಒಬ್ಬರ ಮೇಲೊಬ್ಬರನ್ನು ಛೂ ಬಿಟ್ಟು ಹೇಗೆ ತಮ್ಮಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎನ್ನುವಂಶ ವಿವರವಾಗಿದೆ. ಉತ್ತರ ಕೊರಿಯಾ ಬಿಟ್ಟು ಹೊರಗೇ ಬರದವರಿಗೆ, ಸರಕಾರಿ ಮಾಹಿತಿಯನ್ನು ಬಿಟ್ಟು ಬೇರೇನನ್ನೂ ಕದ್ದು ಮುಚ್ಚಾದರೂ ತಿಳಿಯದೆ ಹೋದವರಿಗೆ ಇಡೀ ವಿಶ್ವದಲ್ಲಿ ಉತ್ತರ ಕೊರಿಯಾ ದೇಶವೇ ಸರ್ವಶ್ರೇಷ್ಠ ದೇಶ! ಇಂತಿರುವ ದೇಶದಲ್ಲಿರುವ ಶ್ರೇಣೀಕರಣ ವ್ಯವಸ್ಥೆಗೆ ಹುಟ್ಟು ಹಾಗು ಕುಟುಂಬದ ಹಿನ್ನೆಲೆ ಪ್ರಮುಖ ಕಾರಣ. ಆಡಳಿತಕ್ಕೆ ಎದುರಾಗಿನಿಂತು ಶ್ರೇಣೀಕರಣ ವ್ಯವಸ್ಥೆಯಲ್ಲಿ ಕೆಳಜಾರಬಹುದೇ ಹೊರತು ಮೇಲೇರುವುದು ಕಷ್ಟದ ಕೆಲಸ. ದೇಶದ ಕಾನೂನಿಗೆ ವಿರುದ್ಧವಾಗಿ ನಿಂತೂ ಜಾರದೆ ಉಳಿಯಲು ಭ್ರಷ್ಟಾಚಾರ ಸಹಾಯಕ. Shantaram ಕಾದಂಬರಿಯಲ್ಲಿ ಬರುವ Problem with corruption is it works fine ಎಂಬ ಮಾತುಗಳು ಎಲ್ಲಾ ದೇಶಕ್ಕೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ.

ಮಧ್ಯಮ ಶ್ರೇಣಿಯಲ್ಲೇ ಇದ್ದ Hyeonseo Lee ಗೆ ಉತ್ತರ ಕೊರಿಯಾ ತೊರೆಯಲು ಹೆಚ್ಚಿನ ಕಾರಣಗಳೇನೂ ಇರಲಿಲ್ಲ. ಕದ್ದು ಮುಖ್ಯ ನೋಡಿದ ಟಿವಿಯ ಕಾರ್ಯಕ್ರಮಗಳಲ್ಲಿ ತೋರಿದ ಪ್ರಪಂಚವನ್ನೊಮ್ಮೆ ಕಾಣಬೇಕೆಂಬ  ವಯೋಸಹಜ ಕುತೂಹಲ (ಆ ಕುತೂಹಲ ಕೂಡ ಉತ್ತರ ಕೊರಿಯಾದಲ್ಲಿ ಸಹಜವಲ್ಲ) ಹೀಗೆ ಒಮ್ಮೆ ಚೀನಾ ದೇಶ ಪ್ರವೇಶಿಸಿದ ಲೇಖಕಿಗೆ ಮತ್ತೆ ಪರ್ಮನೆಂಟಾಗಿ ಉತ್ತರ ಕೊರಿಯಾಗೆ ಹಿಂದಿರುಗುವ ಅವಕಾಶವೂ ಸಿಗುವುದಿಲ್ಲ, ಹಿಂದಿರುಗುವ ಆಸೆಯೂ ಉಳಿಯುವುದಿಲ್ಲ. ಚೀನಾದಲ್ಲಿ ಅಕ್ರಮವಾಸಿಯಾಗಿ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ತೆರಳುತ್ತಾ ನಕಲಿ ಐಡಿಗಳನ್ನು ಪಡೆದು ಅಲ್ಲಿಲ್ಲಿ ಕೆಲಸ ಮಾಡುತ್ತಾ ಶತ್ರು ದೇಶವಾದ ದಕ್ಷಿಣ ಕೊರಿಯಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದು ತನ್ನ ಅಮ್ಮ ಮತ್ತು ತಮ್ಮನನ್ನು ಕೂಡ ಉತ್ತರ ಕೊರಿಯಾದಿಂದ ಪಾರು ಮಾಡಿ ದಕ್ಷಿಣ ಕೊರಿಯಾಗೆ ಕರೆಸಿಕೊಳ್ಳಬೇಕೆಂದು ನಿಶ್ಚಯಿಸುತ್ತಾಳೆ. ಲೇಖಕಿಯ ಆಸೆ ಈಡೇರುತ್ತದಾ ಇಲ್ಲವಾ ಎಂಬುದೇ ಪುಸ್ತಕದ ಮೂಲ ತಿರುಳು.

ಉತ್ತರ ಕೊರಿಯಾ ಶತ್ರು ದೇಶವಾದರೂ ಅಲ್ಲಿಂದ ತನ್ನಲ್ಲಿಗೆ ವಲಸೆ ಬರುವ ಜನರನ್ನು ದೂರ ತಳ್ಳದೆ ತನ್ನ ದೇಶದ ಪ್ರಜೆಗಳನ್ನಾಗಿಸುವ ದಕ್ಷಿಣ ಕೊರಿಯಾದ ನಡೆ ಶ್ಲಾಘನೀಯವೇ ಹೌದು. ದಿನದ ಸುದ್ದಿಗಳನ್ನು ಓದುವಾಗ ಚೀನಾದ ಪೂರ್ಣ ಬೆಂಬಲ ಉತ್ತರ ಕೊರಿಯಾಗಿದೆ ಎಂದು ಅನ್ನಿಸುತ್ತದೆ. ಆದರೆ ವಾಸ್ತವ ಆ ರೀತಿಯಿಲ್ಲ ಎನ್ನುವಂತಹ ಘಟನೆಗಳು ಪುಸ್ತಕದಲ್ಲಿ ದಾಖಲಾಗಿವೆ.

ವಲಸೆ ನಿಯಂತ್ರಿಸುವ ಸಲುವಾಗಿ ಬಿಗಿ ಕಾನೂನು ಇರುವ ದೇಶಗಳಲ್ಲೂ ಅಕ್ರಮವಾಗಿ ದೇಶದೊಳಗೆ ನುಸುಳುವವರಿಗೆ ಸಹಾಯ ಮಾಡುವ ಮಧ್ಯವರ್ತಿಗಳು ಎಲ್ಲಾ ದೇಶಗಳಲ್ಲೂ ಇದ್ದೇ ಇರುತ್ತಾರೆ. ನಮ್ಮ ಇಂಡಿಯಾದಲ್ಲೂ ಇದ್ದೇ ಇರುತ್ತಾರೆ. ದುಡ್ಡು ಪಡೆದು ವಿದೇಶಿಯರಿಗೆ ನಕಲಿ ದಾಖಲೆ ಮಾಡಿಕೊಡುವ ನಮ್ಮ ದೇಶದ ಮಧ್ಯವರ್ತಿಗಳ ಬಗ್ಗೆ ಕೋಪ ಸಿಟ್ಟು ಬರುವುದು ಸಹಜವೇ. ಪುಸ್ತಕ ಓದುವಾಗ ಅಲ್ಲಿ ಬರುವ ಮಧ್ಯವರ್ತಿಗಳ ಬಗ್ಗೆ ಈ ರೀತಿ ಕೋಪ ಸಿಟ್ಟಿನ ಭಾವನೆ ಬರದೆ ಹೆಂಗೋ ಒಂದು ಆ ಹೆಣ್ಮಗ ದಡ ಸೇರ್ಕಂಡ್ರೆ ಸಾಕು ಅಂತ ಹಾರೈಸುತ್ತಿರುತ್ತೀವಿ. 

ಉದಾರ ಮನೋಭಾವ ಪಕ್ಕದ ಮನೆಯವರಲ್ಲಿ ಇರಬೇಕು ನಮ್ಮಲ್ಲಲ್ಲ!

ನವೆಂ 4, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 11: ಮೋದೂರು ಕೆರೆ

ಮೀನಿನ ಬೇಟೆಯಲ್ಲಿ ಬೆಳ್ಳಕ್ಕಿ

ಡಾ. ಅಶೋಕ್.‌ ಕೆ. ಆರ್
ಕುಣಿಗಲ್ಲಿನ ಆಸುಪಾಸಿನಲ್ಲಿರುವ ಕೆರೆಗಳಲ್ಲಿ ನಾನು ಅತಿ ಹೆಚ್ಚು ಭೇಟಿ ಕೊಟ್ಟಿರುವ ಕೆರೆಯಿದು. ಸಂತೆಮಾವತ್ತೂರಿನಿಂದ ಅಮೃತ್ತೂರಿಗೆ ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಈ ಕೆರೆಯನ್ನು ಕಂಡಿದ್ದೆ. ಪುಟ್ಟ ಕೆರೆ. ಕೆರೆಯ ಎದುರಿಗೆ ಶಂಕರೇಶ್ವರ ಬೆಟ್ಟ. ಬೆಟ್ಟದಿಂದ ಹರಿದು ಬರುವ ಮಳೆ ನೀರೇ ಇದರ ಮುಖ್ಯ ಮೂಲ. ಸದ್ಯಕ್ಕೆ ಯಾವ ನದಿಯ, ಕಾಲುವೆಯ ನೀರೂ ಇಲ್ಲಿಗೆ ಹರಿಸಲಾಗಿಲ್ಲ. ಹಾಗಾಗಿ ಮಳೆಗಾಲದಲ್ಲಿ ನೀರು ಹೆಚ್ಚಿರುತ್ತದೆ, ಮಳೆಯ ಪ್ರಮಾಣಕ್ಕೆ ತಕ್ಕಂತೆ; ಬೇಸಿಗೆಯಲ್ಲಿ ಕೆಲವೊಮ್ಮೆ ಹನಿ ನೀರೂ ಇರುವುದಿಲ್ಲ. ೨೦೨೩ರ ಬರಗಾಲದಲ್ಲಿ ನೀರು ಪೂರ್ಣ ಖಾಲಿಯಾಗಿತ್ತು. ಸುತ್ತಮುತ್ತಲಿನವರು ತಮ್ಮ ಜಮೀನಿಗೆ ಮಣ್ಣು ಹೊಡೆದುಕೊಂಡಿದ್ದರು. ಕೆರೆಯ ಮಧ್ಯಭಾಗದಲ್ಲಿ ಬಂಡೆಯೊಂದಿದೆ. 
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಈ ಬಂಡೆಯ ಮೇಲೆ ಕನಿಷ್ಠ ಒಂದು ಜೋಡಿ ನದಿ ರೀವವಾದರೂ ಇದ್ದೇ ಇರುತ್ತದೆ. ಸಾಮಾನ್ಯ ಮಿಂಚುಳ್ಳಿಗಳು ನಾಲ್ಕಿವೆ, ಗದ್ದೆ ಮಿಂಚುಳ್ಳಿ ಕೆಲವೊಮ್ಮೆ ಕಾಣಿಸಿಕೊಂಡರೆ ಕಪ್ಪು ಬಿಳಿ ಮಿಂಚುಳ್ಳಿ ಅಪರೂಪ. ತಿಂಗಳಿಂದೆ ನಾಮದ ಬಾತು (ಯುರೇಷಿಯನ್ ವಿಜಿಯನ್) ಎರಡು ಜೋಡಿ ಮತ್ತು ಆರು ಕಾಟನ್ ಪಿಗ್ಮಿ ಗೂಸ್ ಗಳಿದ್ದವು. ಇಂದು ಇರಲಿಲ್ಲ. ಗುಳುಮುಳುಕ, ನಾಮದ ಕೋಳಿ, ನೇರಳೆ ಜಂಬುಕೋಳಿ, ಜಂಬುಕೋಳಿ, ಬೆಳ್ಳಕ್ಕಿ, ಗೋವಕ್ಕಿ, ಗದ್ದೆ ಗೊರವ, ಬೂದು ಬಕ, ಕೆನ್ನೀಲಿ ಬಕ, ಕೊಳದ ಬಕ, ನೀರ್ಕಾಗೆ ಇದ್ದೇ ಇರುತ್ತವೆ. ಅಪರೂಪಕ್ಕೆ ಹಾವಕ್ಕಿ.

ಅಕ್ಟೋ 25, 2025

ಜಾತಿ ವ್ಯವಸ್ಥೆಯ ವಿಕಾರಗಳಿಗೆ ಕನ್ನಡಿ ಹಿಡಿಯುವ "ಹೆಬ್ಬುಲಿ ಕಟ್"


ಡಾ. ಅಶೋಕ್. ಕೆ. ಆರ್.

ಸಮಾಜದ ವಿಕಾರಗಳಿಗೆ ಕನ್ನಡಿ ಹಿಡಿಯುವ ಇಂತಹ ಚಿತ್ರಗಳನ್ನು "ಚೆನ್ನಾಗಿದೆ" "ಅದ್ಭುತವಾಗಿದೆ" ಎಂದು ಹೇಗೆ ಹೇಳುವುದು? 

ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ʼಹೆಬ್ಬುಲಿ ಕಟ್‌ʼ ಸಿನಿಮಾವನ್ನು ಇವತ್ತು ನೋಡಲು ಸಮಯವಾಯಿತು. ಹದಿಹರೆಯದ ಹುಡುಗನ ಹುಡುಗಿಯೆಡೆಗಿನ ವಯೋಸಹಜ ಆಕರ್ಷಣೆ, ಅದಕ್ಕಿಂತಲೂ ಹೆಚ್ಚಾಗಿ ಒಂದು ಚೆಂದದ ಹೇರ್‌ ಕಟ್‌ ಮಾಡಿಸಿಕೊಳ್ಳಬೇಕೆಂಬ ಚಡಪಡಿಕೆಯೇ ತಳಪಾಯವಾದ ಸಿನಿಮಾ ಲವಲವಿಕೆಯಿಂದ ನೋಡುಗರನ್ನು ನಗಿಸುತ್ತ ನಗಿಸುತ್ತ ಕೊನೆಗೆ ಬೇಸರಕ್ಕೆ, ಎಂತ ಮಾಡಿದರೂ ಸರಿ ಹೋಗದ ನಮ್ಮ ಸಮಾಜದ ಕುರಿತು ಅಸಹನೆ ಮೂಡಿಸಿಬಿಡುತ್ತದೆ. ಬೇಸರ - ಅಸಹನೆ ಮೂಡದೇ ಹೋದರೆ ಅದು ನಮ್ಮಲ್ಲಿರುವ ಜಾತಿ ಮೇಲ್ಮೆಯ ಸೂಚಕ.

ʼಹಿಂದೂ ನಾವೆಲ್ಲ ಒಂದುʼ ಎನ್ನುವ ಘೋಷಣೆ ಈ ಮುಂಚೆಗಿಂತಲೂ ಅತ್ಯುಗ್ರವಾಗಿ ಕೇಳಿಬರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೀವಿ. ಆ ಘೋಷಣೆ ಕೂಡ ಈ ಚಿತ್ರದ ಒಂದು ಪ್ರಮುಖ ಪಾತ್ರಧಾರಿ. ಜೊತೆಗೆ ಐದು ಸಲದ ನಮಾಜಿಗೆ ಕೂಡ ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರವಿದೆ.

ಅಕ್ಟೋ 24, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 10: ಕಿತನಾಮಂಗಲ ಕೆರೆ

ಚಮಚದ ಕೊಕ್ಕುಗಳು
ಡಾ. ಅಶೋಕ್.‌ ಕೆ. ಆರ್
ಹೋಗೋದೋ ಬೇಡ್ವೋ ಅಂದುಕೊಂಡೇ ಕಿತನಾಮಂಗಲದ ಕೆರೆಯ ಕಡೆಗೆ ಹೊರಟೆ. ಕಳೆದ ಬಾರಿ, ತಿಂಗಳಿಂದೆ ನೋಡಿಕೊಂಡು ಬರಲು ಹೋಗಿದ್ದಾಗ ಒಂದಷ್ಟು ಚಮಚದ ಕೊಕ್ಕುಗಳು (ಸ್ಪೂನ್ ಬಿಲ್) ಕಾಣಿಸಿದ್ದವು, ವರ್ಷಪೂರ್ತಿ ಇರುವ ಪಕ್ಷಿಗಳನ್ನು ಹೊರತುಪಡಿಸಿ. ಬಹಳಷ್ಟು ವರ್ಷಗಳಿಂದೆ ಇಲ್ಲಿ ನೂರಾರು ಸಂಖೈಯಲ್ಲಿ ಕರಿಕೊಕ್ಕಿನ ರೀವ (ಕಾಮನ್ ಟರ್ನ್)ಗಳನ್ನು ನೋಡಿದ್ದೆ. ಇನ್ನೊಮ್ಮೆ ನೀರು ಹೆಚ್ಚಿದ್ದ ಸಮಯದಲ್ಲಿ ನೂರಾರು ಸೂಜಿಬಾಲದ ಬಾತುಗಳನ್ನು ಕಂಡಿದ್ದೆ. ಆ ವರ್ಷ ಬಿಟ್ಟರೆ ಬೇರ್ಯಾವ ವರುಷವೂ ನಾ ಭೇಟಿ ಕೊಟ್ಟಾಗ ಅಷ್ಟು ಸಂಖ್ಯೆಯ ಸೂಜಿಬಾಲದ ಬಾತುಗಳು ಕಾಣಿಸಿರಲಿಲ್ಲ.

ಕಿತನಾಮಂಗಲ ಕೆರೆ ಬಹಳ ಅಂದರೆ ಬಹಳ ವಿಶಾಲವಾದುದು. ಆರೇಳು ವರ್ಷದಿಂದೀಚೆಗೆ ಒಂದೇ ಒಂದು ಬಾರಿ ಪೂರ್ತಿ ಕೆರೆ ತುಂಬಿದ್ದನ್ನು ನೋಡಿದ್ದೆ. ಇಲ್ಲವಾದರೆ ಹುಲ್ಲುಗಾವಲಿನಂತೆ ಕಾಣಿಸುತ್ತದೆ. ರಸ್ತೆಗೆ ಹೊಂದಿಕೊಂಡಂತೆ ಬಹಳಷ್ಟು ಒಣಗಿದ ಮರಗಳಿವೆ. ಒಂಥವಾ ದೆವ್ವದ ಸಿನಿಮಾದ ದೃಶ್ಯದಂತೆ ಗೋಚರವಾಗ್ತದೆ. ಜೆಸಿಬಿ ಬಳಸಿ ಕೆರೆಯ ಮಣ್ಣನ್ನು ಸುತ್ತಮುತ್ತಲಿನವರು ತೆಗೆದುಕೊಂಡು ಹೋಗಿರುವುದರಿಂದ ಬಹಳಷ್ಟು ಹಳ್ಳ ದಿಣ‌್ಣೆಗಳು ನಿರ್ಮಾಣವಾಗಿದೆ. ಮೆತ್ತಗಿನ ಮಣ್ಣಿನ ದಿಬ್ಬಗಳನ್ನು ಸಾಮಾನ್ಯ ಮಿಂಚುಳ್ಳಿ, ಕಳ್ಳಿಪೀರಗಳು ಗೂಡು ಕಟ್ಟಲು ಅಪರೂಪಕ್ಕೆ ಬಳಸಿಕೊಳ್ಳುತ್ತವೆ. ಈ ಸಲ ಹಸಿರು ಕಳ್ಳಿಪೀರಗಳು ಅಲ್ಲೊಂದು ಇಲ್ಲೊಂದು ಕಾಣಿಸಿದವಷ್ಟೇ.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ಸೆಪ್ಟೆಂ 11, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 9: ಮುತ್ತುರಾಯನ ಕೆರೆ

ಕವಲುಬಾಲದ ಚಿಟವ
ಡಾ. ಅಶೋಕ್.‌ ಕೆ. ಆರ್
ಬೆಂಗಳೂರಿನಿಂದ ಹೊರಟಿದ್ದು ಹುಲಿಯೂರುದುರ್ಗದ ಬಳಿಯಿರುವ ದೀಪಾಂಬುಧಿ ಕೆರೆಗೆ. ಕೆರೆಯ ತುಂಬಾ ನೀರಿತ್ತು. ಹಾಗಾಗಿ ನೀರ ಪಕ್ಷಿಗಳ ಸಂಖೈ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ನೀಲಿಬಾಲದ ಕಳ್ಳಿಪೀರಗಳು ಅಲ್ಲಲ್ಲಿ ಹಾರಾಡುತ್ತಿದ್ದವು. ಇನ್ನಿಲ್ಲಿ ಅಷ್ಟು ಫೋಟೋಗ್ರಫಿ ಆಗುವುದಿಲ್ಲವೆಂದುಕೊಂಡು ಹುಲಿಯೂರುದುರ್ಗ - ನಾಗಮಂಗಲ ರಸ್ತೆಯಲ್ಲಿರುವ ಮುತ್ತುರಾಯನ ಕೆರೆಯ ಕಡೆಗೆ ಹೋಗೋಣವೆಂದುಕೊಂಡೆ. ದೀಪಾಂಬುಧಿ ಕೆರೆಯಿಂದ ಹತ್ತದಿನೈದು ನಿಮಿಷದ ಪಯಣ. ಮುತ್ತುರಾಯನ ಕೆರೆಯಲ್ಲಿ ಈ ಮುಂಚೆ ಸೂಜಿಬಾಲದ ಬಾತು (ನಾರ್ತನ್ ಪಿನ್ ಟೈಲ್) ಪಕ್ಷಿಗಳನ್ನು ಕಂಡಿದ್ದೆ. ಹದಿನೈದು ಇಪ್ಪತ್ತು ಪಕ್ಷಿಗಳನ್ನು ನೋಡಿದ್ದ ನೆನಪಿತ್ತು. ಜೊತೆಗೆ ಅಲ್ಲೇ ಇರುವ ದೇಗುಲದ ಬಳಿ ಕರಿ ಎದೆಯ ನೆಲಗುಬ್ಬಿ (ಆ್ಯಶಿ ಕ್ರೌನ್ಡ್ ಸ್ಪ್ಯಾರೋ ಲಾರ್ಕ್) ಇದ್ದವು. ಈ ಬಾರಿಯೂ ಅವುಗಳೆಲ್ಲಾ ಕಾಣಸಿಬಹುದಾ ಎಂದುಕೊಳ್ಳುತ್ತಾ ಕೆಂಕರೆ ಊರು ದಾಟಿದ ನಂತರ ಸಿಗುವ ಕೆರೆಯಂಗಳವನ್ನು ತಲುಪಿದೆ. ಕೆರೆಯ ಪಕ್ಕ ನಡೆದು ಹೋಗುವ ದಡದಲ್ಲಿದ್ದ ಒಂದು ಜೋಡಿ ಸೂಜಿಬಾಲದ ಬಾತುಗಳು, ಮೂರ್ನಾಲ್ಕು ಬಿಳಿಹುಬ್ಬಿನ ಬಾತುಗಳು (ಗಾರ್ಗನೆ), ಐದಾರು ವರಟೆಗಳು (ಸ್ಪಾಟ್ ಬಿಲ್ಡ್ ಡಕ್) ನೀರಿಗಿಳಿದು ಎದುರಿನ ದೂರದ ದಡದ ಕಡೆಗೆ ಸಾಗಿಬಿಟ್ಟವು. ಒಂದಷ್ಟು ಗುಳುಮುಳುಕಗಳು ನನ್ನ ಆಗಮನಕ್ಕೆ ಭಯ ಬೀಳದೆ ಅಲ್ಲೇ ದಡದ ಬಳಿಯಲ್ಲೇ ಮುಳುಗೇಳುತ್ತಿದ್ದವು. ನದಿ ರೀವಗಳು (ರಿವರ್ ಟರ್ನ್) ಗದ್ದಲವೆಬ್ಬಿಸುತ್ತ ಜಗಳವಾಡುತ್ತ ಹಾರಾಡುತ್ತಿದ್ದವು. ಅಲ್ಲೇ ಒಂದು ಬದಿಯಲ್ಲಿ ಶೇಖರಣೆಯಾಗಿದ್ದ ನೀರಿನಲ್ಲಿ ಕೆಂಪು ಟಿಟ್ಟಿಭ ನಿಂತಿತ್ತು. ಜನರನ್ನು ಕಂಡೊಡನೆಯೇ ದೊಡ್ಡ ದನಿಯಲ್ಲಿ ಶಬ್ದ ಮಾಡುತ್ತ ಇತರೆ ಪಕ್ಷಿಗಳಿಗೆ ಎಚ್ಚರಿಕೆಯ ಸಂದೇಶ ನೀಡುವ ಟಿಟ್ಟಿಭ ಇಂದ್ಯಾಕೋ ಮೌನದಿಂದಿತ್ತು. 
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಅದರದೊಂದು ಸಾಧಾರಣ ಎನ್ನಿಸುವ ಫೋಟೋ ತೆಗೆದುಕೊಂಡು ಮುಂದೆ ಸಾಗಿದವನಿಗೆ ಕೆರೆಯಿಂದ ನೀರನ್ನೆತ್ತಲು ಹಾಕಿದ್ದ ಹಳೆಯ ಪೈಪೊಂದರ ಬಳಿಯಿದ್ದ ಮರಳಿನಲ್ಲಿ ಮರಳಿನದೇ ಬಣ್ಣದ ಪುಟ್ಟ ಪಕ್ಷಿಗಳು ಕಂಡಂತಾಯಿತು. ಗಮನವಿಟ್ಟು ನೋಡಿದಾಗ ಸರಿಸುಮಾರು ಮೂವತ್ತು ಕವಲುಬಾಲದ ಚಿಟವಗಳು (ಸ್ಮಾಲ್ ಪ್ರಾಟಿನ್ ಕೋಲ್) ಕಂಡವು. ಅಲ್ಲೇ ಇದ್ದ ವಿದ್ಯುತ್ ತಂತಿಯ ಮೇಲೆ ಕುಳಿತಿದ್ದ ಅಂಬರಗುಬ್ಬಿಗಳು (ಸ್ವಿವ್ಟ್) ಹಾರಿ ಹೋದವು. ಕೆಲವು ಕ್ಷಣದ ನಂತರ ಒಂದರ ಹಿಂದೊಂದು ಬಂದು ಮತ್ತದೇ ತಂತಿಯ ಮೇಲೆ ಕುಳಿತವು. ಚಿಟವಗಳ ಚಿತ್ರವನ್ನು ದೂರದಿಂದ ತೆಗೆದು ಅಲ್ಲೇ ಕುಳಿತು. ಒಂದೈವತ್ತು ಅರವತ್ತು ಅಡಿಯಷ್ಟು ಅಂತರವಿತ್ತು ನನಗೂ ಆ ಪಕ್ಷಿಗಳಿಗೂ. ಸೂಕ್ಷ್ಮವಾಗಿ ಗಮನಿಸದೇ ಹೋದರೆ ಈ ಪಕ್ಷಿಗಳ ಇರುವಿಕೆಯೇ ತಿಳಿಯುವುದಿಲ್ಲ.

ಆಗ 13, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 8: ಕೊಮ್ಮಘಟ್ಟ ಕೆರೆ

AI generated image

ಡಾ. ಅಶೋಕ್.‌ ಕೆ. ಆರ್
ಇವತ್ತು ಕ್ಯಾಮೆರಾ ಇಲ್ಲದೆ ಬಂದಿದ್ದೆ. ಕ್ಯಾಮೆರಾ ಇದ್ದರೆ ತಲೆಯಲ್ಲಿ ಚೆಂದದ ಫೋಟೋ ಬಗ್ಗೆಯಷ್ಟೇ ಯೋಚನೆ ಇರ್ತದೆ. ಬಹಳಷ್ಟು ಬಾರಿ ಈ ಯೋಚನೆ - ಯೋಜನೆಯ ನಡುವೆ ಮನಸ್ಸು ಮುದಗೊಳ್ಳುವುದನ್ನೇ ಮರೆತುಬಿಡುತ್ತದೆ. ಜೊತೆಗೆ ಕ್ಯಾಮೆರಾದ ಮೂಲಕ ಪಕ್ಷಿಗಳನ್ನು ನೋಡುವಾಗ ಗಮನವೆಲ್ಲ ಒಂದೆರಡು ಪಕ್ಷಿಗಳ ಮೇಲಷ್ಟೇ ಇರುತ್ತದೆಯೇ ಹೊರತು ಪೂರ್ತಿ ಪರಿಸರದ ಮೇಲಲ್ಲ. ಹೀಗಾಗಿ ಆವಾಗಿವಾಗ ಕ್ಯಾಮೆರಾ ಇಲ್ಲದಿದ್ದಾಗಲೂ ಪಕ್ಷಿಗಳನ್ನು ಗಮನಿಸಬೇಕು!

ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ನಿನ್ನೆ ಬೆಳಿಗ್ಗೆ ಕಾಣೆಯಾಗಿದ್ದ ಹೆಜ್ಜಾರ್ಲೆಗಳೆಲ್ಲ ಇವತ್ತು ಹಾಜರಿ ಹಾಕಿದ್ದವು. ಅಲ್ಲಿಗೆ ಹೆಜ್ಜಾರ್ಲೆಗಳು ಕೊಮ್ಮಘಟ್ಟದಿಂದ ದೂರಾಗಿರಲಿಲ್ಲ ಎನ್ನುವುದು ಖಚಿತವಾಯಿತು. ಬೆಳಗಾಗುವುದಕ್ಕೆ ಮುನ್ನವೇ ಆಹಾರವನ್ನರಿಸಿ ಹೋಗಿ ಸಂಜೆ ಕೊಮ್ಮಘಟ್ಟಕ್ಕೆ ಹಿಂದಿರುಗುತ್ತಿದ್ದವು. ಸಂಖೈ ಮೂರು ದಿನದ ಹಿಂದಿನಷ್ಟಿರಲಿಲ್ಲ. ಸ್ಥಳದ ಅಭಾವವಿರುವುದಕ್ಕೆ ಬೇರೆ ಜಾಗಕ್ಕೆ ಹೋಗಿರಬಹುದು.

ಜುಲೈ 30, 2025

ಜಾತಿಯೆಂಬ ವಾಸ್ತವ ಮತ್ತು ಒಂದು ಸ್ವೀಕೃತಿಗೆ ಕಾಯುತ್ತಿರುವ ಜನರು...

AI generated representative image
ಡಾ. ಅಶೋಕ್.‌ ಕೆ. ಆರ್
ಊರ ಹೊರಗಿದ್ದ ಕಾಲೋನಿಯ ಆಚೆ ಊರಂಚಿನಲ್ಲಿ ಅಲ್ಲೊಂದಿಲ್ಲೊಂದಂತೆ ಇದ್ದ ಮನೆ ಖರೀದಿಸಿ ಆವಾಗಿವಾಗ ಬರುವುದಕ್ಕೆ ಶುರುಮಾಡಿ ಕೆಲವು ತಿಂಗಳುಗಳಾಗಿತ್ತು. ಮನೆಯಂಗಳದಲ್ಲಿ ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದಾಗ ಆ ವ್ಯಕ್ತಿ ಬಂದರು. ಗರಿಗರಿಯಾದ ಹೊಸ ಬಟ್ಟೆ ತೊಟ್ಟುಕೊಂಡಿದ್ದರು. ಅವರ ಅಣ್ಣನ ಮಗನದು ಮದುವೆ – ಕೊಳ್ಳೇಗಾಲದಲ್ಲಿ. ಊರಿಂದಾಗ ಬಸ್ಸು ಹೊರಡುವುದರಲ್ಲಿತ್ತು. ಅಷ್ಟು ದೂರದ ಮದುವೆಗೆ ಕರೆಯಲು ಬಂದಿರಲಿಲ್ಲ. ಮುಂದಿನ ಭಾನುವಾರ ಇಲ್ಲೇ ಇನ್ನೂರು ಅಡಿ ದೂರದಲ್ಲಿ ಅವರ ಅಣ್ಣ ಕಟ್ಟಿಸಿರುವ ಹೊಸ ಮನೆಯೊಂದರ ಮುಂದೆ ಕರ್ನರೆ – ಬೀಗರ ಊಟಕ್ಕೆ ಹೇಳಿ ಹೋಗಲು ಬಂದಿದ್ದರು. ಮುಂದಿನ ವಾರ ಊರಿಗೆ ಬಂದರೆ ಖಂಡಿತ ಬರ್ತೀನಿ ಅಂತೇಳಿದೆ.

ಕರ್ನೆರೆಯ ದಿನ ಹನ್ನೊಂದು ಘಂಟೆಯಷ್ಟೊತ್ತಿಗೆ ಮತ್ತೆ ಬಂದು ನೆನಪಿಸಿದರು. ಬರ್ತೀನಿ ಬಿಡಿ ನೆನಪಿತ್ತು ಅಂತೇಳಿದೆ. ಮಧ್ಯಾಹ್ನದ ಮೇಲೆ ಒಂದಷ್ಟು ಬೇರೆ ಕೆಲಸವಿತ್ತು, ಹಂಗಾಗಿ ಒಂದೂಕಾಲರಷ್ಟೊತ್ತಿಗೆ ಕರ್ನರೆಗೆ ಹೋಗಿ ಊಟ ಮಾಡಿಕೊಂಡು ಹೊರಟುಬಿಡುವ ಎಂದುಕೊಂಡೆ. ಅವರ ಮನೆಯ ಬಳಿ ಹೋದೆ, ಇನ್ನೂ ಮುದ್ದೆ ತಿರುವುತ್ತಿದ್ದದ್ದು ರಸ್ತೆಯಿಂದಲೇ ಕಾಣಿಸುತ್ತಿತ್ತು. ಊಟಕ್ಕಿನ್ನೂ ಕುಳಿತಿರಲಿಲ್ಲ. ಹಂಗೇ ಕಣ್ಣಾಡಿಸಿದೆ. ನನ್ನನ್ನು ಎರಡೆರಡು ಸಲ ಕರೆದು ಹೋಗಿದ್ದವರೂ ಕಾಣಿಸಲಿಲ್ಲ. ಅವರನ್ನು ಬಿಟ್ಟರೆ ಅಲ್ಲಿದ್ದ ಇನ್ಯಾರ ಮುಖ ಪರಿಚಯವೂ ಇಲ್ಲ. ಏನೋ ಊಟ ಈಗಾಗಲೇ ಶುರುವಾಗಿಬಿಟ್ಟಿದ್ದರೆ ಹೋಗಿ ಕುಳಿತು ಊಟ ಮಾಡಿಕೊಂಡು ಹೊರಡಬಹುದಿತ್ತು. ಅವರಲ್ಲಿ ಇದ್ದರೋ ಇಲ್ಲವೋ ಅನ್ನೋದು ಮುಖ್ಯವಾಗಿರಲಿಲ್ಲ! ಈಗಲ್ಲಿ ಹೋಗಿ ಶಾಮಿಯಾನದ ಕೆಳಗೆ ಕೂರಬೇಕು. ಇದ್ಯಾರು ಅಂತ ಗಮನಿಸೋ ಕುತೂಹಲದ ಕಣ್ಣುಗಳಿಗೆ ಆಹಾರವಾಗಬೇಕು. ಯಾಕ್‌ ಬೇಕಪ್ಪ ಸಾವಾಸ ಅಂತ ಹಂಗೇ ಕಾರಿಂದಿಳಿದು ಹೊರಟುಬಿಟ್ಟೆ.

ಜುಲೈ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 7: ಕೊಮ್ಮಘಟ್ಟ ಕೆರೆ ಮತ್ತು ಉಲ್ಲಾಳ ಕೆರೆ

ಹೊಂಬೆಳಕಿನಲ್ಲಿ ಕಂಡ ಚಲುಕದ ಬಾತುಗಳು
ಡಾ. ಅಶೋಕ್.‌ ಕೆ. ಆರ್
ಕೊಮ್ಮಘಟ್ಟ ಕೆರೆಯಲ್ಲಿ ಬೆಳಗಿನ ಸಮಯ ಬೆಳಕು ಯಾವ ಕಡೆಯಿಂದ ಬರುತ್ತದೆಂಬ ಅಂದಾಜಾಗಿದ್ದರಿಂದ ಆರೂವರೆಯಷ್ಟೊತ್ತಿಗೆ ಕೆರೆಯಂಗಳ ತಲುಪಿದೆ. ಸೂರ್ಯ ಮೂಡಲು ಇನ್ನೂ ಹತ್ತದಿನೈದು ನಿಮಿಷವಿತ್ತು. ಕೊಮ್ಮಘಟ್ಟ ರಸ್ತೆಗೆ ತಿರುಗುತ್ತಿದ್ದಂತೆಯೇ ವಿಪರೀತ ಮಂಜು, ಚಳಿ.

ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ


ಕೆರೆಯಂಗಳಕ್ಕೆ ಕಾಲಿಟ್ಟರೆ ಅಚ್ಚರಿ. ಹೆಜ್ಜಾರ್ಲೆ(ಪೆಲಿಕಾನ್)ಗಳ ಸುಳಿವೇ ಇಲ್ಲ! ಅಲ್ಲೆಲ್ಲೋ ಒಂದೆರಡು ದೂರದಲ್ಲಿ ಕಂಡವು. ಬಹುಶಃ ಹೆಜ್ಜಾರ್ಲೆಗಳು ಸಂಜೆಯ ಸಮಯದಲ್ಲಿ ವಿರಮಿಸಲಷ್ಟೇ (ರೂಷ್ಟಿಂಗ್) ಇಲ್ಲಿಗೆ ಬರುತ್ತಿರಬೇಕು. ಅಥವಾ ಪಾಚಿ ತುಂಬಿರುವ ಕೆರೆಯಲ್ಲಿ ಮೀನುಗಳ ಸಂಖೈ ಹೆಚ್ಚಿಲ್ಲದ ಕಾರಣ ಇಲ್ಲಿಂದ ಜಾಗ ಖಾಲಿ ಮಾಡಿರಬೇಕು ಎಂದುಕೊಂಡೆ. ಚಲುಕದ ಬಾತುಗಳು ಕೆಲವು ಮಾತ್ರ ನೀರಿನಲ್ಲಿದ್ದವು. ಉಳಿದವಿನ್ನೂ ನಡುಗಡ್ಡೆಯ ಅಂಚಿನಲ್ಲಿ ವಿರಮಿಸುತ್ತಿದ್ದವು.

ಜುಲೈ 5, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 6: ಕೊಮ್ಮಘಟ್ಟ ಕೆರೆ - 3

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಕೆರೆಯ ಬಳಿ ಹೆಚ್ಚು ಸಮಯ ಕಳೆಯಬೇಕಿತ್ತು. ಸಂಜೆ ಮನೆಗೆ ಬರೋದು ತಡವಾಗ್ತದೆ ಎಂದು ಹೇಳಿಯೇ ಹೊರಟಿದ್ದೆ. ಸೂರ್ಯಾಸ್ತದ ಜೊತೆ ಹೆಜ್ಜಾರ್ಲೆಯ ಫೋಟೋ ತೆಗೆಯಬೇಕೆಂಬ ಆಸೆ. ಕೆರೆಯಲ್ಲಿ ಹೆಜ್ಜಾರ್ಲೆಗಳ ಸಂಖೈ ಹೆಚ್ಚಾಗಿತ್ತು. ಮರದ ಮೇಲಿದ್ದಷ್ಟೇ ಪಕ್ಷಿಗಳು ನೀರಿನಲ್ಲೂ ಇದ್ದವು.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಕೆರೆಯ ಉತ್ತರಭಾಗದಲ್ಲಿದ್ದ ಮತ್ತೊಂದು ಮರದ ಮೇಲೂ ಒಂದೆರಡು ಹೆಜ್ಜಾರ್ಲೆಗಳು ಕಂಡವು. ಆ ಮರದಲ್ಲಿ ಈ ಮುಂಚೆ ಬೆಳ್ಳಕ್ಕಿಗಳು ಹಾಗು ಒಂದೆರಡು ಬೂದು ಬಕಗಳಷ್ಟೇ ಕಾಣಿಸಿದ್ದವು. ಚಲುಕದ ಬಾತುಗಳ ಸಂಖೈ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಅನಿಸಿತು. ಅವುಗಳಿನ್ನೂ ಕ್ಯಾಮೆರಾದ ಲೆನ್ಸಿಗೆ ಸಿಲುಕದಷ್ಟು ದೂರದಲ್ಲಿಯೇ ಇದ್ದವು. ಅರ್ಧ ತಲೆಯನ್ನು ನೀರಿನಲ್ಲಿ ಮುಳುಗಿಸಿ ಸಲಿಕೆ ಆಕಾರದ ಕೊಕ್ಕನ್ನು ತೆರೆದು ಆಹಾರದ ಹುಡುಕಾಟದಲ್ಲಿ ಇರುತ್ತಿದ್ದವು. ಗಂಡು ಪಕ್ಷಿಯ ಹಸಿರು - ಹಳದಿ ಬಣ್ಣದ ಕಣ್ಣಿನ ಪ್ರತಿಬಿಂಬ ಚೆಂದವಾಗಿ ಕಾಣಿಸುತ್ತಿತ್ತು.

ಜೂನ್ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 5: ಕೊಮ್ಮಘಟ್ಟ ಕೆರೆ - 2

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಇಂದು ಕ್ಯಾಮೆರಾ, ದೊಡ್ಡ ಲೆನ್ಸುಗಳೆರಡನ್ನೂ ತಂದಿದ್ದೆ. ಚಲುಕದ ಬಾತುಗಳು ಕೆರೆಯ ಮಧ್ಯಭಾಗದಲ್ಲಿದ್ದವು. ಕ್ಯಾಮೆರಾಗೆ ಅಷ್ಟು ಚೆನ್ನಾಗಿ ಸಿಗುತ್ತಿರಲಿಲ್ಲ. ಜೊತೆಗೆ ಸಂಜೆಯ ಸಮಯವಾದ್ದರಿಂದ ಕೆರೆಯ ನೀರು ಗಾಳಿಗೆ ತುಯ್ದಾಡುತ್ತಿತ್ತು. ಪ್ರತಿಬಿಂಬದ ಚಿತ್ರಗಳನ್ನು ತೆಗೆಯೋದಿಕ್ಕೆ ನನಗೆ ಹೆಚ್ಚು ಆಸಕ್ತಿ. ಬೆಳಗಿನ ಜಾವದಲ್ಲಿ ಸೂರ್ಯಕಿರಣಗಳಿನ್ನೂ ತಣ್ಣನೆಯ ಬೆಳಕನ್ನು ಹೊರಸೂಸುವಾಗ ಗಾಳಿಯ ತುಯ್ದಾಟ ಇಲ್ಲದೇ ಇದ್ದಾಗ ಕೆರೆಯ ನೀರು ಕನ್ನಡಿಯಂತಿರುತ್ತದೆ. ಎಂಟು, ಒಂಭತ್ತು ಘಂಟೆಯೊಳಗಷ್ಟೇ ಆ ಪ್ರತಿಬಿಂಬದ ಚಿತ್ರಗಳನ್ನು ತೆಗೆಯಬಹುದು.