ಜೂನ್ 10, 2025

ಬೆಚ್ಚಿ ಬೀಳಿಸದ "ಸ್ಟೋಲನ್"

ಸ್ಟೋಲನ್ ಚಿತ್ರದ ಒಂದು ದೃಶ್ಯ 
ಡಾ. ಅಶೋಕ್. ಕೆ. ಆರ್
ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳ ಮಗು ಕಳ್ಳತನವಾಗ್ತದೆ. ಮಗು ಕದ್ದು ಓಡುತ್ತಿದ್ದವಳು ಅದೇ ತಾನೇ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಡಿಕ್ಕಿ ಹೊಡೆಯುತ್ತಾಳೆ. ಆ ಯುವಕನ ಮೇಲೇ ಮೊದಲ‌ ಅನುಮಾನ. ಕೊನೆಗೆ ಆ ಯುವಕ ಕಳ್ಳತನಕ್ಕೆ ಸಾಕ್ಷಿಯಾಗುತ್ತಾನೆ. ಮಗು ಕಳೆದುಕೊಂಡ ಯುವತಿ, ಸಾಕ್ಷೀದಾರ ಯುವಕ, ಯುವಕನನ್ನು ಮನೆಗೆ ಕರೆದೊಯ್ಯಲು ಬಂದ ಅವನಣ್ಣ ಕೂಡ ಇಷ್ಟವಿದ್ದೊ ಇಷ್ಟವಿಲ್ಲದೆಯೋ ಮಗುವನ್ನು ಹುಡುಕುವುದರಲ್ಲಿ ತೊಡಗಿಕೊಳ್ಳುತ್ತಾರೆ.

ಜೂನ್ 6, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 4: ಕೊಮ್ಮಘಟ್ಟ ಕೆರೆ – 1

ಚಲುಕದ ಬಾತು (ನಾರ್ಥರ್ನ್‌ ಶೆವಲರ್‌)
ಡಾ. ಅಶೋಕ್.‌ ಕೆ. ಆರ್
ಕೊಮ್ಮಘಟ್ಟ ಕೆರೆಗೆ ಫೋಟೋಗ್ರಫಿಗೆ ಹೋಗಿ ಬಹಳವೇ ಕಾಲವಾಗಿತ್ತು
. ಇ – ಬರ್ಡ್‌ ತಂತ್ರಾಂಶದಲ್ಲಿ ಚಲುಕದ ಬಾತು (ನಾರ್ಥರ್ನ್‌ ಶೆವಲರ್‌ಗಳು) ಬಂದಿದ್ದಾವೆ ಎಂಬ ಮಾಹಿತಿಯಿತ್ತು. ಏಳು ವರ್ಷಗಳ ಹಿಂದೆ ಉಲ್ಲಾಳ ಕೆರೆಯಲ್ಲಿ ಚಲುಕದ ಬಾತುಗಳನ್ನು ಕಂಡು ಫೋಟೋಗ್ರಫಿ ಮಾಡಿದ್ದೆ. ಅಲ್ಲೇ ಕೆರೆಯ ಬಳಿ ಪರಿಚಯವಾಗಿದ್ದ ದೇವೆಂದ್ರ ಕುಮಾರ್‌ ಮತ್ತವರ ಸ್ನೇಹಿತರಾದ ಸದಾಶಿವ ಪೂಜಾರಿಯವರ ಜೊತೆಯಲ್ಲಿ.

ಮುಂಚೆ ಕಂಡಿದ್ದಂತೆ ಕೊಮ್ಮಘಟ್ಟ ಕೆರೆಯಲ್ಲಿ ವರುಷವಿಡೀ ಬೆಳ್ಳಕ್ಕಿ, ನೇರಳೆ ಜಂಬುಕೋಳಿ (ಪರ್ಪಲ್‌ ಸ್ವಾಂಪ್‌ಹೆನ್‌), ನೀರ್ಕಾಗೆ (ಕಾರ್ಮೊರಂಟ್), ಬಿಳಿಹುಬ್ಬಿನ ದೇವನಕ್ಕಿ (ಬ್ರಾನ್ಜ್‌ ವಿಂಗ್ಡ್‌ ಜಕಾಣ), ಹಾವಕ್ಕಿ (ಡಾರ್ಟರ್‌), ವರಟೆ (ಸ್ಪಾಟ್‌ ಬಿಲ್ಡ್‌ ಡಕ್‌), ಗದ್ದೆಗೊರವ (ಸ್ಯಾಂಡ್‌ಪೈಪರ್‌), ಗುಳುಮುಳುಕ, ನಾಮದ ಕೋಳಿಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲದ ಸಮಯದಲ್ಲಿ ಬಹಳಷ್ಟು ಹೆಜ್ಜಾರ್ಲೆಗಳನ್ನೂ (ಪೆಲಿಕಾನ್‌) ಕಾಣಬಹುದು.

ಕೆರೆಯ ಪಕ್ಕದ ರಸ್ತೆಗೆ ಬರುತ್ತಿದ್ದಂತೆಯೇ ಕೆಟ್ಟ ವಾಸನೆ. ಕೆರೆಯ ಒಂದು ಬದಿಯಲ್ಲಿ ವಿಪರೀತವಾಗಿ ಬೆಳಿದಿದ್ದ ಪಾಚಿ, ಕಸದ ನಡುವೆ ತೇಲುತ್ತಿರುವ ಪ್ಲಾಸ್ಟಿಕ್‌ ಬಾಟಲಿಗಳು. ಈ ಮಲಿನ ಕೆರೇಲಿ ಇನ್ಯಾವ ಪಕ್ಷಿಗಳಿರೋದಿಕ್ಕೆ ಸಾಧ್ಯ ಎಂದುಕೊಂಡವನಿಗೆ ಕೆರೆಯಿಡೀ ಪಕ್ಷಿಗಳ ರಾಶಿಯೇ ಕಾಣಿಸಿತು. ಚಲುಕದ ಬಾತುಗಳು ಅರ್ಧ ಕೆರೆಯನ್ನಾಕ್ರಮಿಸಿದ್ದವು. ಮಧ್ಯದ ನಡುಗಡ್ಡೆಯಲ್ಲಿದ್ದ ಮರದಲ್ಲಿ ಒಂದಷ್ಟು ಪೆಲಿಕಾನುಗಳಿದ್ದವು. ಜೊತೆಗೆ ಒಂದಷ್ಟು ದೊಡ್ಡ ನೀರ್ಕಾಗೆಗಳು (ಗ್ರೇಟರ್‌ ಕಾರ್ಮರಂಟ್).‌ ನೀರ್ಕಾಗೆಗಳು ಗೂಡು ಕಟ್ಟುವ ಕಾಲ. ಕಡ್ಡಿಗಳನ್ನು ಬಾಯಲ್ಲಿ ಕಚ್ಚಿ ಹಿಡಿದು ತರುತ್ತಿದ್ದವು. ಕೆರೆಯ ಮತ್ತೊಂದು ಬದಿಯಲ್ಲಿ ಮೋರಿ ನೀರು ಕೆರೆಯನ್ನು ಪ್ರವೇಶಿಸುತ್ತಿತ್ತು. ಈ ಗಲೀಜು ನೀರನ್ನು ಬಳಸಿಕೊಂಡು ಹಯಾಕಾಂತ್‌ “ಕಳೆಯು” ಸೊಂಪಾಗಿ ಬೆಳೆದಿತ್ತು. ಈ ಗಿಡವನ್ನೇ ಹಾದಿಯಾಗಿಸಿಕೊಂಡು ಆಹಾರ ತಿನ್ನುವಲ್ಲಿ ಮಗ್ನವಾಗಿದ್ದವು ನೇರಳೆ ಜಂಬುಕೋಳಿ, ಬಿಳಿಹುಬ್ಬಿನ ದೇವನಕ್ಕಿ, ಮಿಂಚು ಕೆಂಬರಲು (ಗ್ಲಾಸಿ ಐಬಿಸ್‌), ಬೆಳ್ಳಕ್ಕಿ, ಗದ್ದೆಗೊರವ, ಅಡವಿ ಗದ್ದೆಗೊರವ, ಕೊಳದ ಬಕ, ಒಂದು ಜಂಬುಕೋಳಿ (ಮೂರ್‌ಹೆನ್‌) ಕುಟುಂಬ. ನೀರಿನಲ್ಲಿ ಒಂದತ್ತು ಸಿಳ್ಳೆಬಾತುಗಳು (ಲೆಸ್ಸರ್‌ ವಿಸ್ಲಿಂಗ್‌ ಡಕ್‌) ಕಾಣಿಸಿದವು.
ಹೆಜ್ಜಾರ್ಲೆ (ಪೆಲಿಕಾನ್‌)
ಪಕ್ಷಿಗಳನ್ನು ನೋಡಿಹೋಗಲೆಂದು ಬಂದವನು ಪಾಯಿಂಟ್‌ ಅಂಡ್‌ ಶೂಟ್‌ ಕ್ಯಾಮೆರಾ ಮಾತ್ರ ತಂದಿದ್ದೆ. ಅದರಲ್ಲಿ ಪಕ್ಷಿಗಳನ್ನು ನೋಡಬಹುದೇ ಹೊರತು ಉತ್ತಮ ಫೋಟೋ ತೆಗೆಯುವುದು ಸಾಧ್ಯವಿಲ್ಲ.

ಅಲ್ಲೇ ವಾಕಿಂಗಿಗೆ ಬಂದಿದ್ದ, ಪಕ್ಷಿ ವೀಕ್ಷಣೆಯ ಅಭ್ಯಾಸವಿದ್ದ ಪ್ಲಾಸ್ಟಿಕ್‌ ಸರ್ಜನ್‌ ಡಾ. ಮಂಜುನಾಥ್‌ರವರ ಪರಿಚಯವಾಯಿತು.

ಮೇ 20, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 3: ಆಗರ ಕೆರೆಯಲ್ಲಿನ್ನೊಂದು ದಿನ - 31/12/2024

Egret
ಸಾಮಾನ್ಯ ಪಕ್ಷಿಯ ವಿಶೇಷ ನೋಟ - ಬೆಳ್ಳಕ್ಕಿ
ಡಾ. ಅಶೋಕ್.‌ ಕೆ. ಆರ್
ವರುಷದ ಕೊನೆಯ ದಿನ ಆಗರ ಕೆರೆಗೆ ಮತ್ತೊಂದು ಸುತ್ತು ಹೋಗುವ ಮನಸ್ಸಾಯಿತು. ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗಲೂ‌  ಹೆಚ್ಚೇನು ಪಕ್ಷಿಗಳು ಅಲ್ಲಿ ಸಿಕ್ಕಿರಲಿಲ್ಲವಾದರೂ ಅಲ್ಲಿನ ಪರಿಸರ ಚೆಂದಿತ್ತು.
ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ಜೊತೆಗೆ ಮೀನು ಹಿಡಿದು ದಡದಲ್ಲಿ ಅದನ್ನು ಸ್ವಚ್ಛಗೊಳಿಸಿದರೆ ಅಂದಿನಂತೆ ಒಂದಷ್ಟು ಗರುಡಗಳ (ಬ್ರಾಮಿಣಿ ಕೈಟ್) ಫೋಟೋ ತೆಗೆಯಲಂತೂ ಮೋಸವಿರಲಿಲ್ಲ. ಉಳಿದಿದ್ದ ಕೊನೆಯೆರಡು ರಜೆಗಳ ಸದುಪಯೋಗ ಈ ರೀತಿಯೇ ಆಗಬೇಕಲ್ಲವೇ?!

ನಿರೀಕ್ಷಿಸಿದಂತೆ ಹೆಚ್ಚಿನ ಪಕ್ಷಿಗಳಿರಲಿಲ್ಲ. ಮೀನು ಹಿಡಿಯುವವರಿದ್ದರು. ಕಳೆದ ಬಾರಿ ಹಳದಿ ಹೂವುಗಳ ಪ್ರತಿಬಿಂಬ ತೆಗೆದ ಸ್ಥಳಕ್ಕೆ ಹೋದೆ. ದೂರದಲ್ಲೊಂದು ಬೂದು ಬಕ (ಗ್ರೆ ಹೆರಾನ್) ಕುಳಿತಿತ್ತು. ಪ್ರತಿಬಿಂಬ ಪೂರ್ತಿ ಕಾಣಿಸುತ್ತಿರಲಿಲ್ಲವಾದರೂ ಮುಂಜಾನೆಯ ಬೆಳಕಿಗೆ ಚೆಂದವಾಗೇನೋ ಕಾಣುತ್ತಿತ್ತು. ಅದರ ಫೋಟೋ ತೆಗೆಯಲು ಪ್ರಯತ್ನಿಸುವಾಗ ಒಂದು ಜೋಡಿ ಗುಳುಮುಳುಕಗಳು ಕೂಡ ಆಟವಾಡುತ್ತಾ, ತಿಂಡಿ ತಿನ್ನುತ್ತಾ ಬೂದು ಬಕದ ಬಳಿಯೇ ಬಂದವು. ಹೇಳಿಕೊಳ್ಳುವಂತಹ ಫೋಟೋ ಸಿಗಲಿಲ್ಲವಾದರೂ ಮನಸಿಗೆ ಮುದ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ.

ಮೇ 2, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 2: ಆಗರ ಕೆರೆಯಲ್ಲೊಂದು ದಿನ…

ಮಂಜಾವರಿಸಿದ ಕೆರೆಯಲ್ಲಿ ಗುಳುಮುಳುಕ
ಡಾ. ಅಶೋಕ್. ಕೆ. ಆರ್.  
ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ ಆಗರ ಕೆರೆಗೆ ಬಹಳ ವರುಷಗಳ ಹಿಂದೆ ಒಂದು ಬಾರಿ ಹೋಗಿದ್ದೆ. ಆ ಕೆರೆ ಈಗ ಹೇಗಿದೆ, ಪಕ್ಷಿಗಳಿದ್ದಾವೋ ಇಲ್ಲವೋ ನೋಡೋಣವೆಂದುಕೊಂಡು ಬೆಳಗಿನ ಆರರ ಸಮಯದಷ್ಟೊತ್ತಿಗೆ ಆಗರ ಕೆರೆಯನ್ನು ತಲುಪಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ಕಾರಣ ಆಗರ ಕೆರೆ ತುಂಬಿ ನಿಂತಿತ್ತು. ಕೆರೆಯ ಒಂದು ಬದಿಯಲ್ಲಿ ನಮ್ಮ ಅಭಿವೃದ್ಧಿಯ ಕುರುಹಾಗಿ ಕೆಲವು ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಮತ್ತೊಂದು ತುದಿಯಲ್ಲಿ ಕಿರು ಅರಣ್ಯ ಹರಡಿಕೊಂಡಿತ್ತು. ಭಾನುವಾರವಾಗಿದ್ದರಿಂದ ಜನರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಬೆಳಗಿನ ಕಾಯಕ

ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.

ಜನ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 1: ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.

Indian paradise flycatcher/ ಬಾಲದಂಡೆ/ ರಾಜಹಕ್ಕಿ 
ಡಾ. ಅಶೋಕ್.‌ ಕೆ. ಆರ್

ಹೆಂಡ್ರುಗೆ ಆರ್‌.ಆರ್.‌ ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್‌ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್‌ ಪ್ಯಾರಡೈಸ್‌ ಫ್ಲೈಕ್ಯಾಚರ್‌ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್‌ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!

ಡಿಸೆಂ 28, 2024

ಕ್ಯಾಪಿಟಲಿಸಂ ಬಿಟ್ಟು ಬೇರೆ ಆಯ್ಕೆ ನಿಜಕ್ಕೂ ನಮ್ಮ ಮುಂದಿದೆಯೇ?

 

image source: yourdictionary

ಡಾ. ಅಶೋಕ್.‌ ಕೆ. ಆರ್.

ಯಾರಾದರೂ ಎಡಪಂಥೀಯ – ಬಲಪಂಥೀಯ ಅಂತ ಮಾತನಾಡುವಾಗ, ವಾದ ಮಾಡುವಾಗ ನಿಜಕ್ಕೂ ಈಗ ನಮ್ಮಲ್ಲಿ ಎಡಪಂಥೀಯತೆ – ಬಲಪಂಥೀಯತೆ ಅನ್ನುವುದಿದೆಯೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಲೇ ಇರುತ್ತದೆ. ಈ ರೀತಿಯಾಗಿ ಮಾತನಾಡುವ, ವಾದ ಮಾಡುವ ನಾವೆಲ್ಲರೂ ಬಂಡವಾಳಶಾಹಿ – ಕ್ಯಾಪಿಟಲಿಸ್ಟುಗಳೇ ಅಲ್ಲವೇ ಎನ್ನುವ ಯೋಚನೆ ಸುಳಿಯುತ್ತದೆ. ಅಬ್ಬಬ್ಬಾ ಅಂದರೆ ಒಂಚೂರು ಎಡಕ್ಕಿರುವ ಅಥವಾ ಒಂದಷ್ಟು ಬಲಕ್ಕಿರುವ ಕ್ಯಾಪಿಟಲಿಸ್ಟುಗಳಷ್ಟೇ ಅಲ್ಲವೇ ನಾವು ಬಹುತೇಕರು…

ನರಸಿಂಹರಾವ್‌ ಕಾಲದಲ್ಲಿ, ಮನಮೋಹನ್‌ ಸಿಂಗ್‌ರವರು ಹಣಕಾಸು ಸಚಿವರಾಗಿದ್ದಾಗಿನ ಸಮಯದಲ್ಲಿ ಇಂಡಿಯಾ ಜಾಗತೀಕರಣಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿತು. ಹಲವು ವರುಷಗಳ ಕಾಲ ವಿಧವಿಧದ ವಿರೋಧಗಳನ್ನು ಈ ಹೊಸ ಆರ್ಥಿಕ ನೀತಿಗಳು ಎದುರಿಸಿತಾದರೂ ಅಂತಿಮವಾಗಿ ಕ್ಯಾಪಿಟಲಿಸಂ ಎನ್ನುವ ಸಿದ್ಧಾಂತವಲ್ಲದ ಸಿದ್ಧಾಂತ ಉಳಿದೆಲ್ಲ ಸಿದ್ಧಾಂತಗಳನ್ನು ಮೀರಿ ಜಯಿಸಲಾರಂಭಿಸಿತು ಎನ್ನುವುದು ತಿರಸ್ಕರಿಸಲಾಗದ ವಾಸ್ತವ.

ನವೆಂ 22, 2024

ಎಲ್ಲೆಡೆ ಸಲ್ಲುವ “ಬಂಧಮುಕ್ತ”


ಡಾ. ಅಶೋಕ್. ಕೆ. ಆರ್
ಕೆಲವೊಂದು ಪುಸ್ತಕಗಳೇ ಹಾಗೆ, ನೇರಾನೇರ ಸಂಬಂಧವಿಲ್ಲದಿದ್ದರೂ ನಮ್ಮ ನಡುವಿನದೇ ಪುಸ್ತಕವೆನಿಸಿಬಿಡುತ್ತದೆ. ನಮ್ಮದಲ್ಲದ ಸಂಸ್ಕೃತಿಯ, ನಮ್ಮ ದೇಶದ್ದಲ್ಲದ, ನಮ್ಮ ಖಂಡದ್ದೂ ಅಲ್ಲದ ದೂರದ ದೇಶವೊಂದರ ಲೇಖಕಿಯ ಬರಹಗಳು ನಮ್ಮ ಸುತ್ತಮುತ್ತಲಿನ ಸಮಾಜಕ್ಕೇ ಕನ್ನಡಿ ಹಿಡಿದಂತಿರುವುದನ್ನು ಮೆಚ್ಚಬೇಕೋ ಅಲ್ಲಿರುವ ಸಂಕಷ್ಟ ದುಮ್ಮಾನಗಳು ನಮ್ಮಲ್ಲೂ ಇರುವುದಕ್ಕೆ ದುಃಖ ಪಡಬೇಕೋ ಎನ್ನುವ ಗೊಂದಲಗಳೊಂದಿಗೆಯೇ ಪುಸ್ತಕ ಓದಿ ಮುಗಿಸಿದೆ.
ಪುಸ್ತಕದ ವ್ಯಾಪ್ತಿ ಹಿರಿದಾದುದು. ಕಪ್ಪು ಜನರ ಬವಣೆ, ಕಪ್ಪು ಮಹಿಳೆಯರ ಬವಣೆ, ಸ್ತ್ರೀವಾದ, ಬದಲಾದ ಸಮಾಜದಲ್ಲಿ ಶೋಷಣೆಯ ರೂಪಗಳೂ ಮಾರ್ಪಾಡಾಗುವುದು, ಒಂದು ಕಾಲದಲ್ಲಿ ಶೋಷಣೆಗೊಳಗಾಗಿದ್ದವರೆ ಮತ್ತೊಂದು ಹಂತದಲ್ಲಿ ಶೋಷಕರಾಗುವ ಬಗೆಇವೆಲ್ಲದರ ಜೊತೆಗೆ ಮನುಕುಲದ ಅವನತಿಗೆ ಬಹುಮಖ್ಯ ಕಾರಣವಾದ ಸ್ವಪ್ರೀತಿಯ ಕೊರತೆಯ ಬಗೆಗಿನ ಒಳನೋಟಗಳನ್ನು ಕೊಡುವ ಪುಸ್ತಕ ಬೆಲ್ ಹುಕ್ಸ್ರವರಬಂಧ ಮುಕ್ತ, ಪ್ರೀತಿಯ ಹುಡುಕಾಟದಲ್ಲಿ ದಮನಿತರು”. ಶ್ರೀಮತಿ ಎಚ್.ಎಸ್ರವರ ಸಶಕ್ತ ಅನುವಾದವು ಪುಸ್ತಕವನ್ನು ಮತ್ತಷ್ಟು ಆಪ್ತಗೊಳಿಸುತ್ತದೆ.

ಮಾರ್ಚ್ 13, 2024

ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'


ಡಾ. ಅಶೋಕ್. ಕೆ. ಆರ್

ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿತ್ರ ಬ್ಲಿಂಕ್. ಗಟ್ಟಿ ಚಿತ್ರಕತೆಯಿದ್ದು ಉತ್ತಮ ನಿರ್ದೇಶನವಿದ್ದರೆ ಕಡಿಮೆ ಬಜೆಟ್ಟಿನಲ್ಲಿ, ಸುತ್ತಮುತ್ತಲಿರುವ ಕೆಲವೊಂದು ಜಾಗಗಳನ್ನು ಬಳಸಿಕೊಂಡೇ ಒಂದು ಉತ್ತಮ, ಉತ್ತಮವೇನು ಅತ್ಯುತ್ತಮ ಚಿತ್ರವನ್ನೇ ಜನರ ಮುಂದಿಡಬಹುದೆಂದು ಬ್ಲಿಂಕ್ ನಿರ್ದೇಶಕ ಶ್ರೀನಿಧಿ ತೋರಿಸಿಕೊಟ್ಟಿದ್ದಾರೆ.

ಅನಾದಿ ಕಾಲದಿಂದಲೂ ಆಗೊಮ್ಮೆ ಈಗೊಮ್ಮೆ ಎಲ್ಲಾ ಭಾಷೆಗಳಲ್ಲಿ ಟೈಂ ಟ್ರಾವೆಲ್ನ ಕುರಿತಾದ ಚಿತ್ರಗಳು ಮೂಡಿಬರುತ್ತಲೇ ಇವೆ. ವಾಸ್ತವದಲ್ಲಿರುವುದನ್ನು ಬಿಟ್ಟು ಹಿಂದಿನ ಮುಂದಿನ ಸಮಯಕ್ಕೆ ಹೋಗುವಾಸೆ ಮನುಷ್ಯನಿಗೆ ಇದ್ದೇ ಇದೆಯಲ್ಲ! ಲಾಜಿಕ್ಕಾಗಿ ನೋಡಿದರೆ ಟೈಂ ಟ್ರಾವೆಲ್ ಅನ್ನೋದೆ ಇಲ್ಲಾಜಿಕಲ್! ಹಂಗಾಗಿ ಟೈಂ ಟ್ರಾವೆಲ್ ಯಾವ ರೀತಿ ಮಾಡಿದರು ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ವಾಚ್ ಕಟ್ಟಿಕೊಂಡು, ಟೈಂ ಮೆಷೀನಿನ ಒಳಗೆ ಕುಳಿತುಕೊಂಡು, ಏನನ್ನೋ ಕುಡಿದುಹೀಗೆ ಹತ್ತಲವು ರೀತಿಯಲ್ಲಿ ಟೈಂ ಟ್ರಾವೆಲ್ಲನ್ನು ಚಿತ್ರಗಳಲ್ಲಿ ತೋರಿಸಿದ್ದಾರೆ, ಬ್ಲಿಂಕ್ ಚಿತ್ರದಲ್ಲಿ ಅಡ್ವಾನ್ಸ್ಡ್ ಲ್ಯಾಪ್ ಟಾಪಿನ ಮುಂದೆ ಕುಳಿತುಕೊಂಡು ದ್ರವ್ಯವೊಂದನ್ನು ಕಣ್ಣಿಗೆ ಎರಡು ತೊಟ್ಟು ಹಾಕಿಕೊಂಡರೆ ಸಾಕು ನಮಗೆ ಯಾವ ಹಿಂದಿನ ಕಾಲಕ್ಕೆ ಹೋಗಬೇಕೋ ಅಲ್ಲಿಗೆ ಹೋಗಿಬಿಡಬಹುದು. ಹೇ! ಅಷ್ಟು ಸುಲಭದಲ್ಲಿ ಟೈಂ ಟ್ರಾವೆಲ್ ಮಾಡಿಬಿಡಬಹುದಾ ಅಂತೆಲ್ಲ ಕೇಳಬೇಡಿ. ಟೈಂ ಟ್ರಾವೆಲ್ ಅನ್ನೋದೆ ಅಸಾಧ್ಯವಾಗಿರುವಾಗ ಅಷ್ಟು ಸುಲಭದಲ್ಲೋ ಇಷ್ಟು ಕಷ್ಟದಲ್ಲೋ ಅನ್ನೋದೆಲ್ಲ ಇಲ್ಲಾಜಿಕಲ್ ಪರಿಧಿಯೊಳಗೇ ಇರ್ತದೆ!

ಏಪ್ರಿ 18, 2023

ಕಾಡಿನ ನ್ಯಾಯಕ್ಕೆ ವಿರುದ್ಧವಾದ "ದಿ ಎಲಿಫೆಂಟ್ ವಿಸ್ಪರರ್ಸ್"

ಚಿತ್ರಮೂಲ: ಎಕನಾಮಿಕ್ ಟೈಮ್ಸ್
ಡಾ. ಅಶೋಕ್. ಕೆ. ಆರ್

ಕಾಡ ನಡುವಿನಲ್ಲಿ ಮರಿಯಾನೆಯೊಂದು ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗುತ್ತದೆ. ಆಹಾರ ಹುಡುಕುವ, ನೀರನ್ನರಸುವ ಗುಣಗಳನ್ನು ಹಿಂಡಿನ ಹಿರಿಯರಿಂದ ಇನ್ನೂ ಕಲಿಯದ ಮರಿಯಾನೆಗೆ ಜೀವವುಳಿಸಿಕೊಳ್ಳುವುದು ಕಷ್ಟದ ಸಂಗತಿಯೇ ಸರಿ. ಮರಿಯಾನೆಯ ಕೂಗಾಟ ಅರಣ್ಯ ಇಲಾಖೆಯ ಕಿವಿಗೆ ತಲುಪುತ್ತದೆ. ಕಾಡಿನ ನಿಯಮಗಳಿಂದ ರಕ್ಷಿಸಲ್ಪಟ್ಟ ಈ ಮರಿಯಾನೆಯನ್ನು ಸಾಕುವ ಜವಾಬ್ದಾರಿಯನ್ನು ಇಲಾಖೆಯ ಕೆಲಸಗಾರರಾದ, ಮೂಲತಃ ಆದಿವಾಸಿಗಳಾದ ಇಬ್ಬರಿಗೆ ವಹಿಸಲಾಗುತ್ತದೆ. ಆ ಈರ್ವರ ನಡುವಿನ ವೈಯಕ್ತಿಕ ಸಂಬಂಧ, ಆನೆಯನ್ನು ಸಾಕಿ ಸಲಹುವ ಪರಿ, ಆನೆ ಜೊತೆಗಿನ ಮಮಕಾರದ ಸಂಬಂಧವೇ "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದ ಹೂರಣ. 

ಆಸ್ಕರ್ರಿಗೆ ಭಾರತದಿಂದ ಕಳುಹಿಸಲ್ಪಟ್ಟ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮವೆಂಬ ಪ್ರಶಸ್ತಿಯೂ ದೊರೆತು ಖ್ಯಾತಿಗಳಿಸಿದ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನೋಡಲು ಲಭ್ಯವಿದೆ. ಆಸ್ಕರ್ ದೊರೆಯುವ ಮುಂಚೆ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೆ. ನೋಡಿದ ಯಾರಿಗಾದರೂ ಕಣ್ಣಂಚಿನಲ್ಲಿ ನೀರು ತರಿಸುವ ಚಿತ್ರವಿದು. ನಾನೂ ಅದಕ್ಕೆ ಹೊರತಲ್ಲ.

ಆಗ 19, 2022

ಎಲ್ಲಕಿಂತ ಜೀವ ಮುಖ್ಯ…

- ಡಾ. ಅಶೋಕ್.‌ ಕೆ. ಆರ್‌

ಪೂರ್ವಿಕಾಳ ಹೆಸರಿನಿಂದ (ಹೆಸರು ಬದಲಿಸಲಾಗಿದೆ) ಫೇಸ್‌ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಬಂದಿತ್ತು. ನಲವತ್ತು ಚಿಲ್ಲರೆ ಮಂದಿ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಮುಂಚಿನಂತೆ ಬಂದೆಲ್ಲ ಸ್ನೇಹಿತರ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲವಾದ್ದರಿಂದ ಪೂರ್ವಿಕಾಳ ಪ್ರೊಫೈಲಿನ ಮೇಲೆ ಕ್ಲಿಕ್ಕಿಸಿದೆ. ಸುಳ್ಯದ ವಿದ್ಯಾರ್ಥಿನಿಯ ಫೋಟೋ ಇದ್ದ ಪ್ರೊಫೈಲದು. ಸುಳ್ಯದ ಹಳೆಯ ವಿದ್ಯಾರ್ಥಿಗಳೇ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ದಿನದ ನಂತರ ಪೂರ್ವಿಕಾಳ ಪ್ರೊಫೈಲಿನಿಂದ ಮೆಸೆಂಜರ್‌ನಲ್ಲಿ ʻಹಾಯ್‌ʼ ಎಂದೊಂದು ಮೆಸೇಜು ಬಂದಿತ್ತು. ಮೆಸೇಜುಗಳನ್ನು ಆಗಾಗ್ಯೆ ನೋಡುವ ಅಭ್ಯಾಸವಿಲ್ಲದ ಕಾರಣ ಒಂದಷ್ಟು ಸಮಯದ ನಂತರ ʻಹಾಯ್‌ʼ ಎಂದು ಉತ್ತರಿಸಿ ʻಹೇಗಿದ್ದೀಯಪ್ಪ?ʼ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಪೂರ್ವಿಕಾ ಕೇರಳದ ಹುಡುಗಿ ಎಂದು ನೆನಪಿತ್ತು. ʻನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಿ?ʼ ಎಂದು ಕೇಳಿದವಳು ನನ್ನ ಮರುತ್ತರಕ್ಕೂ ಕಾಯದೆ ನಿಮ್ಮ ವಾಟ್ಸಪ್‌ ನಂಬರ್‌ ಕಳುಹಿಸಿ ಅಲ್ಲಿಯೇ ಚಾಟ್‌ ಮಾಡುವ ಎಂದು ಕೇಳಿದಳು. ಓಹ್!‌ ಇದು ಅಸಲಿ ಖಾತೆ ಇರಲಿಕ್ಕಿಲ್ಲ ಎಂದರಿವಾಯಿತಾಗ. ಹಳೆಯ ವಿದ್ಯಾರ್ಥಿಗಳು ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಕೇಳಲು, ಅಥವಾ ಬಹಳ ವರುಷಗಳ ನಂತರ ಮಾತನಾಡಲು ಫೋನ್‌ ನಂಬರ್‌ ಕೇಳುವುದು ಅಪರೂಪವೇನಲ್ಲ. ಆದರೆ ಚಾಟ್‌ ಮಾಡಲು ವಾಟ್ಸಪ್‌ ನಂಬರ್‌ ಕೇಳುವುದು ಸಾಮಾನ್ಯ ಸಂಗತಿಯೇನಲ್ಲ. ಪರಿಚಿತರ ಫೋಟೋ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಸ್ನೇಹದ ಕೋರಿಕೆ ಕಳುಹಿಸಿ ಮೆಸೆಂಜರ್‌ನಲ್ಲಿ ʻತುರ್ತು ಅವಶ್ಯಕತೆ ಇದೆ. ಒಂದೈದು ಸಾವಿರ ಗೂಗಲ್‌ ಪೇ ಮಾಡಿʼ ಎಂದು ಬೇಡಿಕೆ ಇಡುವ ಸ್ಕ್ಯಾಮು ಹೆಚ್ಚಿದೆ. ಇಲ್ಲಿ ಹಣದ ಬೇಡಿಕೆಯೂ ಇಲ್ಲದೆ ವಾಟ್ಸಪ್‌ ನಂಬರ್‌ ಕೇಳುತ್ತಿದ್ದಾರಲ್ಲಾ? ಇದ್ಯಾವ ಹೊಸ ಮೋಸದ ಯೋಜನೆಯಿರಬಹುದು ಎಂಬ ಕುತೂಹಲವುಂಟಾಯಿತು. ನವಮೋಸದ ಪರಿ ಹೇಗಿರಬಹುದೆಂದು ತಿಳಿಯಬಯಸುವ ಆಸಕ್ತಿಯಿಂದ ವಾಟ್ಸಪ್‌ ನಂಬರ್‌ ಅನ್ನು ಕಳುಹಿಸಿದೆ. ಮೊದಲ ದಿನ ʻಹಾಯ್‌ʼʻಬಾಯ್‌ʼ ಮೆಸೇಜಿವೆ ಸಂವಹನ ಸೀಮಿತವಾಗಿತ್ತು. ಮಾರನೆಯ ದಿನ ಮತ್ತೇನೂ ಹೆಚ್ಚಿನ ಸಂವಾದಗಳಿಲ್ಲದೆ ಸೀದಾ ಸಾದಾ ವೀಡಿಯೋ ಕರೆ ಮಾಡುವ ಬೇಡಿಕೆ ಅತ್ತಲಿಂದ ಬಂತು. ಇವರ ಮೋಸದ ಹೊಸ ಯೋಜನೆಯ ರೂಪುರೇಷೆ ಸೂಕ್ಷ್ಮವಾಗಿ ಅರಿವಾಯಿತಾದರೂ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುವ ಉತ್ಸಾಹವಿನ್ನೂ ಕಡಿಮೆಯಾಗಿರಲಿಲ್ಲ! ʻವೀಡಿಯೋ ಕರೆ ಯಾಕೆ?ʼ ಎಂದು ಮುಗ್ಧನಂತೆ ಕೇಳಿದೆ. ಮೆಸೇಜುಗಳಲ್ಲಿ ನಾನಿನ್ನೂ ಅತ್ತಲಿನವರನ್ನು ನನ್ನ ಹಳೆಯ ವಿದ್ಯಾರ್ಥಿನಿಯೆಂದೇ ತಿಳಿದುಕೊಂಡಿರುವಂತೆ ನಂಬಿಸಿದೆ. ʻನಾನೊಬ್ಳೇ ಇದೀನಿ. ವೀಡಿಯೋ ಕರೆ ಮಾಡಿ. ಬಾತ್‌ರೂಮಿಗೆ ಹೋಗಿ ಕಾಲ್‌ ಮಾಡಿʼ ಎಂದು ನೇರಾನೇರ ಅಶ್ಲೀಲ ವೀಡಿಯೋ ಕರೆಗೆ ಬೇಡಿಕೆ ಬಂತು! ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂದು ಟೈಪಿಸಿದ್ದನ್ನು ಕಳುಹಿಸುವುದಕ್ಕೆ ಮೊದಲೆಯೇ ವೀಡಿಯೋ ಕರೆ ಬಂದಿತು! ಕಾಲೇಜಿಗೆ ಹೊರಡುತ್ತಿದ್ದವನು ಇವರ ಆಟ ಪೂರ್ತಿಯೇ ನೋಡಿಬಿಡುವ ಎಂದು ಕರೆ ಸ್ವೀಕರಿಸಿದೆ. ಅತ್ತ ಕಡೆ ಹುಡುಗಿಯೊಬ್ಬಳಿದ್ದಳು. ಖಂಡಿತಾ ಸುಳ್ಯದ ವಿದ್ಯಾರ್ಥಿನಿ ಪೂರ್ವಿಕಾಳಲ್ಲ ಅವಳು. ಅತ್ತ ಕಡೆ ಹುಡುಗಿ ಇದ್ದಿದ್ದೂ ಅನುಮಾನವೇ, ಕಂಪ್ಯೂಟರಿನಲ್ಲಿದ್ದ ಹುಡುಗಿಯ ವೀಡಿಯೋ ಒಂದನ್ನು ಬಳಸಿಕೊಂಡಂತನ್ನಿಸಿತು. ಆರೇಳು ಸೆಕೆಂಡುಗಳಲ್ಲಿ ಕರೆ ತುಂಡಾಯಿತು. ʻಬಾತ್‌ರೂಮಿಗೆ ಹೋಗಿ. ಸೆಕ್ಸ್‌ ವೀಡಿಯೋ ಕರೆ ಮಾಡುವʼ ಎಂದು ಬಂದ ಮೆಸೇಜಿಗೆ ಈಗಾಗಲೇ ಟೈಪಿಸಿದ್ದ ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂಬ ಮೆಸೇಜನ್ನು ಕಳುಹಿಸಿ ಕಾಲೇಜಿಗೆ ಹೊರಟೆ. ಸಂಜೆ ವಾಟ್ಸಪ್ಪಿನಲ್ಲಿ ಪುಟ್ಟ ವೀಡಿಯೋ ಒಂದನ್ನು ಕಳುಹಿಸಿದ್ದರು. ಆರು ಸೆಕೆಂಡಿನ ನನ್ನ ಬೆಳಗಿನ ವೀಡಿಯೋ ಕರೆ ರೆಕಾರ್ಡು ಮುಗಿದ ನಂತರ ಬಚ್ಚಲು ಮನೆಯಲ್ಲಿ ಪುರುಷನೊಬ್ಬ ಜನನಾಂಗ ತೋರಿಸಿರುವ ಮತ್ತೊಂದು ತುಣುಕನ್ನು ಸೇರಿಸಿ ಮಾಡಲಾಗಿದ್ದ ವೀಡಿಯೋ ಅದು. ವೀಡಿಯೋ ಹಿಂದೆಯೇ ಒಂದಷ್ಟು ಸ್ಕ್ರೀನ್‌ಶಾಟುಗಳನ್ನು ಕಳಿಸಿದರು. ಫೇಸ್‌ಬುಕ್ಕಿನ ನನ್ನ ಪ್ರೊಫೈಲಿನಲ್ಲಿದ್ದ ನನ್ನ ನೆಂಟರಿಷ್ಟರ ಕಸಿನ್ಸುಗಳ ಪಟ್ಟಿ ಅದು. ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ಪಟ್ಟಿಯಲ್ಲಿರುವ ನಿಮ್ಮ ಕಸಿನ್ಸುಗಳಿಗೆಲ್ಲ ಈ ವೀಡಿಯೋ ಕಳಿಸುತ್ತೀವಿ. ನಿಮ್ಮ ಮಾನ ಮರ್ಯಾದೆ ಹೋಗ್ತದೆ, ಯೋಚನೆ ಮಾಡಿ. ತುರ್ತು ಪ್ರತಿಕ್ರಿಯಿಸಿ ಎಂಬ ಮೆಸೇಜು ಹಿಂದಿ ಭಾಷೆಯಲ್ಲಿ ಬಂದಿತ್ತು. ʻಇದು ನನ್ನ ವೀಡಿಯೋನೆ ಅಲ್ಲ. ಯಾರಿಗಾದರೂ ಕಳಿಸಿಕೊಳ್ಳಿʼ ಎಂದುತ್ತರಿಸಿದೆ. ಕರೆ ಬಂತು. ಸ್ವೀಕರಿಸಿದೆ. ಜೋರು ಹಿಂದಿಯಲ್ಲಿ ಹಣದ ಬೇಡಿಕೆ ಇರಿಸಿದರು. ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿದೆ. ಯಾವ ಪೋಲೀಸರ ಬಳಿಯಾದರೂ ಹೋಗಿ. ನಮಗೇನೂ ಹೆದರಿಕೆ ಇಲ್ಲ ಎಂದರು. ಯಾರಿಗಾದರೂ ವೀಡಿಯೋ ಕಳಿಸಿಕೊಳ್ಳಿ, ನಿಮ್ಮ ಹಣೆಬರಹ ಎಂದೇಳಿ ಫೋನಿಟ್ಟೆ. ಪಟ್ಟಿಯಲ್ಲಿದ್ದ ಕೆಲವು ಕಸಿನ್ಸುಗಳಿಗೆ ಮೆಸೆಂಜರ್‌ನಲ್ಲಿ ವೀಡಿಯೋ ಕಳುಹಿಸಿದ ಸ್ಕ್ರೀನ್‌ ಶಾಟುಗಳನ್ನು ತೆಗೆದು ನನಗೆ ಕಳುಹಿಸಿ ʻಇನ್ನೂ ಅವರು ವೀಡಿಯೋ ನೋಡಿಲ್ಲ. ದುಡ್ಡು ಕಳುಹಿಸಿದರೆ ವೀಡಿಯೋ ಡಿಲೀಟ್‌ ಮಾಡ್ತೀನಿʼ ಎಂದವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಫೇಸ್‌ಬುಕ್ಕಿನಲ್ಲಿ ಘಟನೆ ಕುರಿತಾಗಿ ವಿವರವಾಗಿ ಬರೆದು ʻಪೂರ್ವಿಕಾʼಳ ನಕಲಿ ಖಾತೆಯನ್ನು ಟ್ಯಾಗ್‌ ಮಾಡಿ ಫೋನ್‌ ನಂಬರ್‌ ಹಾಕಿ ʻಈ ರೀತಿಯೂ ಮೋಸ ಮಾಡುತ್ತಿದ್ದಾರೆ. ಎಚ್ಚರಿಕೆʼ ಎಂದು ಪೋಸ್ಟ್‌ ಮಾಡಿದೆ. ಒಂದಷ್ಟು ಸ್ನೇಹಿತರು, ವಿದ್ಯಾರ್ಥಿಗಳು ಅವರಿಗೂ ಈ ರೀತಿ ವೀಡಿಯೋ ಕಾಲ್‌ ಮಾಡುವಂತೆ ಮೆಸೇಜುಗಳು ಬಂದಿದ್ದರ ಬಗ್ಗೆ ತಿಳಿಸಿದರು. ಇನ್ನೊಂದಷ್ಟು ಜನರು ತಮ್ಮ ಪರಿಚಯಸ್ಥರು ಈ ರೀತಿಯ ವಂಚನೆಗೆ ಸಿಕ್ಕಿ ಫೇಸ್‌ಬುಕ್ಕನ್ನೇ ತೊರೆದ ಬಗ್ಗೆ ಮೆಸೇಜು ಮಾಡಿ ತಿಳಿಸಿದರು. ಇವ ಬಡಪಟ್ಟಿಗೆ ಸಿಗುವ ಆಳಲ್ಲ ಎಂದರಿವಾಗಿ ಪೂರ್ವಿಕಾಳ ನಕಲಿ ಖಾತೆಯವ ನನ್ನನ್ನು ಫೇಸ್‌ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬ್ಲಾಕ್‌ ಮಾಡಿಬಿಟ್ಟ.